Tuesday, 20 September 2016

ಬೆಂಗಳೂರು
ರಾಯಣ್ಣ ಹುಟ್ಟೂರಲ್ಲಿ ಶೌರ್ಯ ಅಕಾಡಮಿ ಸ್ಥಾಪನೆ: ಸಿಎಂ
ಸಿದ್ದರಾಮಯ್ಯ
ವಾರ್ತಾ ಭಾರತಿ : 20 Sep, 2016
ಬೆಂಗಳೂರು, ಸೆ. 20: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಹುಟ್ಟೂರಾದ
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿಯಲ್ಲಿ ‘ಶೌರ್ಯ
ಅಕಾಡೆಮಿ’ ಸ್ಥಾಪಿಸಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ
ಸಿದ್ದರಾಮಯ್ಯ ಇಂದಿಲ್ಲಿ ಹೇಳಿದ್ದಾರೆ.
ಮಂಗಳವಾರ ನಗರದ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ
ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ
ಪ್ರಾಧಿಕಾರದ ಸಭೆಯಲ್ಲಿ ಸಂಗೊಳ್ಳಿ ರಾಯಣ್ಣರ ಹುಟ್ಟೂರಲ್ಲಿ ಶೌರ್ಯ
ಅಕಾಡೆಮಿ ಸ್ಥಾಪಿಸಲು ತೀರ್ಮಾನಿಸಲಾಗಿದೆ.
ಸಂಗೊಳ್ಳಿ ರಾಯಣ್ಣ ಶೌರ್ಯ ಅಕಾಡೆಮಿಯು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ
ಮಾದರಿಯಲ್ಲಿ ಕಾರ್ಯ ನಿರ್ವಹಿಸಲಿದೆ. ಅಕಾಡೆಮಿ ಸ್ಥಾಪನೆಗೆ ಬೇಕಾದ 100 ಎಕರೆ
ಜಮೀನಿನ ಸ್ವಾಧೀನಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ
ಸಿದ್ದರಾಮಯ್ಯ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.
ರಾಯಣ್ಣ ಹೊಂದಿದ್ದ ಸ್ವಾಮಿ ನಿಷ್ಠೆ, ಶೌರ್ಯ, ದೇಶಾಭಿಮಾನ, ವಿಶ್ವಮಾನವ
ಮೌಲ್ಯ, ಗುಣಗಳನ್ನು ಯುವ ಜನತೆಗೆ ಪರಿಚಯಿಸುವುದು ಅಕಾಡೆಮಿ
ಸ್ಥಾಪನೆಯ ಉದ್ದೇಶವಾಗಿದ್ದು, ಈ ಅಕಾಡೆಮಿ ಯುವ ಸಬಲೀಕರಣ
ಕೇಂದ್ರವಾಗಿ ಕಾರ್ಯನಿರ್ವಹಿಸುವಂತೆ ಮಾಡಬೇಕು. ಅದೇ ರೀತಿ,
ರಾಯಣ್ಣ ಅವರ ಹುಟ್ಟೂರು, ಅವರನ್ನು ನೇಣುಗಂಬಕ್ಕೆ ಏರಿಸಿದ ಹಾಗೂ
ಸಮಾಧಿ ಸ್ಥಳವನ್ನು ಅಭಿವೃದ್ಧಿಪಡಿಸಲು ಈ ಹಿಂದೆ ಪ್ರತಿಷ್ಠಾನ ರಚಿಸಲಾಗಿತ್ತು.
ಇಂದಿನ ಸಭೆಯಲ್ಲಿ ಪ್ರತಿಷ್ಠಾನವನ್ನು ಪ್ರಾಧಿಕಾರವನ್ನಾಗಿ ಬದಲಿಸುವ
ನಿರ್ಣಯಕ್ಕೆ ಸಭೆ ಒಪ್ಪಿಗೆ ಸೂಚಿಸಿತು. ಅದೇ ರೀತಿ, ಸಭೆಯಲ್ಲಿ ಆಲದಮರ ಮತ್ತು
ಸಮಾಧಿ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವಾಗಿ ಅಭಿವೃದ್ಧಿ ಪಡಿಸಲು,
ಇದಕ್ಕಾಗಿ ಇತಿಹಾಸ ತಜ್ಞರನ್ನು ಒಳಗೊಂಡ ಸಮಿತಿ ರಚಿಸಲು
ನಿರ್ಧರಿಸಲಾಯಿತು. ಪ್ರಾಧಿಕಾರದ ಕಚೇರಿ ಬೆಳಗಾವಿಯ ಜಿಲ್ಲಾಧಿಕಾರಿಗಳ
ಕಚೇರಿಯಲ್ಲಿ ಕಾರ್ಯ ನಿರ್ವಹಿಸಲಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ
ಪ್ರತಿಷ್ಠಾನವನ್ನು ಪ್ರಾಧಿಕಾರವನ್ನಾಗಿ ಬದಲಿಸಿ ಅಭಿವೃದ್ಧಿ ಕಾಮಗಾರಿಗಳಿಗೆ 10
ಕೋಟಿ ರೂ. ಒದಗಿಸುವುದಾಗಿ ಮುಖ್ಯಮಂತ್ರಿಗಳು 2015-16ನೆ ಸಾಲಿನ
ಬಜೆಟ್ನಲ್ಲಿ ಘೋಷಿಸಿದ್ದರು. ಅದರಂತೆ ಕೈಗೊಂಡಿರುವ ಅಭಿವೃದ್ಧಿ
ಕಾಮಗಾರಿಗಳ ಪ್ರಗತಿ ಕುರಿತು ಮುಖ್ಯಮಂತ್ರಿಯವರು ಸಭೆಯಲ್ಲಿ ಪರಿಶೀಲನೆ
ನಡೆಸಿದರು.
ನಂದಗಡದ ಎಪಿಎಂಸಿ ಯಾರ್ಡ್ನಲ್ಲಿ ರಾಯಣ್ಣ ಹೆಸರಿನಲ್ಲಿ ಸ್ಮಾರಕ ಭವನ
ನಿರ್ಮಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ 190 ಲಕ್ಷ ರೂ.ಗಳ ವೆಚ್ಚದಲ್ಲಿ
ಯೋಜನೆ ರೂಪಿಸಿದೆ. ಈವರೆಗೆ 40 ಲಕ್ಷ ರೂ.ಗಳನ್ನು ಬಿಡುಗಡೆ
ಮಾಡಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಸಭೆಗೆ
ತಿಳಿಸಿದರು.
ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಸಮಾಜ ಕಲ್ಯಾಣ ಸಚಿವ
ಆಂಜನೇಯ, ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ, ಬೆಳಗಾವಿ
ಜಿಲ್ಲಾಧಿಕಾರಿ ಜಯರಾಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ
ದಯಾನಂದ್, ವಾರ್ತಾ ಇಲಾಖೆ ನಿರ್ದೇಶಕ ವಿಶುಕುಮಾರ್ ಸೇರಿ ಪ್ರಮುಖರು
ಹಾಜರಿದ್ದರು.

No comments:

Post a Comment